ನನ್ನ ಹೆಸರು ಅರ್ಪಣಾ . ನಾನೊಬ್ಬ ಅನುಜ್ಞೆ ಪಡೆದಿರುವ ನ್ಯಾಯವಾದಿ ಹಾಗು ೧೯೯೨ ರಿಂದ ಅಮ್ಮನ ಭಕ್ತೆಯಾಗಿದ್ದೇನೆ. ಗೇಲ್ ಟ್ರೆಡ್ವೆಲ್ ಆಶ್ರಮ ಬಿಟ್ಟ ಸಮಯದಲ್ಲಿ ನಾನು ಹವಾಯಿಯಲ್ಲಿದ್ದೆ. ಆಗ ಅವಳ ಪರಿಚಯ ಅಷ್ಟಾಗಿ ಇರಲಿಲ್ಲವಾದರೂ ಅವಳು ಹವಾಯಿಗೆ ಬಂದಿದ್ದಾಳೆ ಎಂದು ನನಗೆ ತಿಳಿದುಬಂದಿತು. ಇರಲು ಜಾಗ ಹುಡುಕುತ್ತಿದ್ದಾಳೆ ಎಂದು ಗೊತ್ತಾದಾಗ ನಮ್ಮ ಮನೆಗೆ ಬಂದಿರಲು ಆಹ್ವಾನಿಸಿದೆವು. ಗೇಲ್ ಬಂದು ಮುಂದಿನ ಒಂದು ವರ್ಷಕಾಲ ನಮ್ಮ ಮನೆಯಲ್ಲಿ ಇದ್ದಳು. ಆ ಒಂದು ವರ್ಷ ಕಾಲ ಅವಳಿಗೆ ಉಚಿತವಾಗಿ ಊಟ, ವಸತಿ, ಮತ್ತೆ ಜೀವಿಸಲು ಬೇಕಾದ ಅಕ್ಕರೆ ತುಂಬಿದ ಉತ್ತಮ ಉತ್ತೇಜಕ ವಾತಾವರಣವೂ ಅವಳಿಗೆ ಒದಗಿಸಿದೆವು. ನಾವು ಮನೆಮಂದಿ ಅವಳೊಂದಿಗೆ ಒಟ್ಟಿಗೆ ಸಮಯ ಕಳೆದೆವು; ನಾವು ಒಟ್ಟಿಗೆ ಅಡಿಗೆ ಮಾಡುತ್ತಿದ್ದೆವು, ಸಮುದ್ರತೀರಕ್ಕೆ ಹೋಗಿ ಈಜಾಡುತ್ತಿದ್ದೆವು, ನಾಯಿಯ ಜೊತೆ ಆಟವಾಡುತ್ತಿದ್ದೆವು, ಮಿತ್ರವರ್ಗದವರೊಂದಿಗೆ ಸಮಯ ಕಳೆಯುತ್ತಿದ್ದೆವು. ಅವಳು ಡ್ರೈವಿಂಗ್ ಕಲಿಯುತ್ತಿದ್ದಳು, ಹಾಗು ನಾನವಳಿಗೆ ಪ್ಯಾರಲೆಲ್ ಪಾರ್ಕಿಂಗ್ ಕಲಿಸಿದೆ. ಒಟ್ಟಿನಲ್ಲಿ ಹೇಳಬೆಕೆಂದರೆ, ಅವಳು ಒಬ್ಬ ಮನೆಯ ಸದಸ್ಯಳೇ ಆಗಿದ್ದಳು.
ಅಮ್ಮನ ಭಕ್ತೆಯರ ಒಂದು ಪುಟ್ಟ ಗುಂಪು ಇತ್ತು; ನಾವೆಲ್ಲಾ ಅವಳ ಬೆನ್ನಿಗೆ ಸಹಾಯವಾಗಿದ್ದೆವು. ಒಟ್ಟಿಗೆ ಕಲೆಯುತಿದ್ದೆವು. ಅಮ್ಮನೊಂದಿಗೆ ಕಳೆದ ಆ ಹಳೆಯ ಕಾಲದ ಕಥೆಗಳನ್ನು ಹೇಳಿಕೊಳ್ಳುತ್ತಿದ್ದೆವು. ಗೇಲ್ ಈ ಮಾತುಕತೆಗಳಲ್ಲಿ ತಾನಾಗಿ ಬಂದು ಪಾಲ್ಗೊಳ್ಳುತ್ತಿದ್ದಳು, ತನ್ನ ಕಥೆಗಳನ್ನು ಹಂಚಿಕೊಳ್ಳುತ್ತಾ, ನಗೆ ಚಟಾಕಿ ಹಾರಿಸುತ್ತಿದ್ದಳು. ಆಶ್ರಮ ಬಿಟ್ಟುಬಂದ ಮೇಲಿನ ಆ ಮೊದಲ ಒಂದು ವರ್ಷದಲ್ಲಿ ಒಮ್ಮೆಯೂ ಅವಳು, ಈಗ ತನ್ನ ಪುಸ್ತಕದಲ್ಲಿ ಸೇರ್ಪಡಿಸಿರುವ ಶೋಷಣೆಯ, ಹಿಂಸೆಗಳ ದೋಷಾರೋಪಗಳನ್ನು ಉಲ್ಲೇಖ ಮಾಡಿರಲಿಲ್ಲ. ಭಕ್ತೆಯರ ಆ ಗುಂಪಿನಲ್ಲಿಯೂ ಸಹ ಮಾತುಕತೆಯಲ್ಲಿ, ಈಗ ಹದಿನಾಲ್ಕು ವರ್ಷಗಳ ನಂತರ ಬರೆದ ಪುಸ್ತಕದಲ್ಲಿ ವರ್ಣಿಸಿರುವ ಯಾವುದೇ ಲೈಂಗಿಕ ಶೋಷಣೆಯ ವಿಚಾರದ ಸುಳಿವೂ ಇರಲಿಲ್ಲ.
“ಆಶ್ರಮ ಬಿಟ್ಟುಬಂದ ಆ ಮೊದಲ ಒಂದು ವರ್ಷದಲ್ಲಿ ಒಮ್ಮೆಯೂ ಅವಳು, ಈಗ ತನ್ನ ಪುಸ್ತಕದಲ್ಲಿ ಸೇರ್ಪಡಿಸಿರುವ ಶೋಷಣೆಯ, ಹಿಂಸೆಗಳ ದೋಷಾರೋಪಗಳನ್ನು ಉಲ್ಲೇಖ ಮಾಡಿರಲಿಲ್ಲ.”
ಗೇಲ್ ನನ್ನೊಂದಿಗೆ ಆಪ್ತವಾಗಿ ಮನತೆರೆದುಕೊಳ್ಳುತ್ತಿದ್ದಳು. ಆಶ್ರಮದ ಬಗ್ಗೆ ಅವಳಿಗೆ ಅನ್ನಿಸುತ್ತಿದ್ದ ಅತೃಪ್ತಿಯನ್ನು, ಅಮ್ಮ ಮತ್ತು ಸ್ವಾಮಿಯರೆಲ್ಲಾ ಅವಳನ್ನು ಕೀಳಾಗಿ ಕಾಣುತ್ತಿದ್ದರು ಎನಿಸುತ್ತಿದ್ದನ್ನು ಹೇಳಿಕೊಳ್ಳುತ್ತಿದ್ದಳು; ತಾನು ಅಮ್ಮನ ಆಶ್ರಮವನ್ನು ನಡೆಸುತ್ತಿದ್ದವಳು ಎಂದು ಭಾವಿಸಿದ್ದ ಅವಳು ಅದಕ್ಕೆ ತಕ್ಕನಾದ ಮರ್ಯಾದೆ ಮತ್ತು ಮನ್ನಣೆಯನ್ನು ಅವರು ಕೊಡಲಿಲ್ಲ ಎಂದು ನನ್ನಲ್ಲಿ ಹೇಳಿಕೋಳ್ಳುತ್ತಿದ್ದಳು. ಅದರಿಂದಾಗಿ ಅವಳಿಗೆ ಅಮ್ಮನ ಮೇಲಿನ ವಿಶ್ವಾಸ ಹೋಯಿತೆಂದು ಹೇಳಿದಳು. ನನ್ನ ಜೊತೆಗೆ ಇದ್ದ ಆ ಒಂದು ಇಡೀ ವರ್ಷದಲ್ಲಾಗಲೀ, ಆಮೇಲೆ ಆಗಲೀ ಅವಳು ಎಂದಿಗೂ ಲೈಂಗಿಕ ಶೋಷಣೆಯ ಬಗ್ಗೆ ಆರೋಪ ಮಾಡಿರಲೇ ಇಲ್ಲ. ಒಂದು ಸೂಚನೆ ಸಹ ಇಲ್ಲ. ಏನೂ ಇಲ್ಲ. ಆಧ್ಯಾತ್ಮಿಕ ಮಾರ್ಗದಲ್ಲಿ ದಾರಿತಪ್ಪಿದ ಒಬ್ಬ ಮಹಿಳೆಯಾಗಿ ಮಾತ್ರ ಅವಳು ನನಗೆ ಕಂಡುಬಂದಿದ್ದಳು. ಗೇಲ್ ಎಂದಿಗೂ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ಆದರೆ ಇತರರನ್ನು ಕ್ರೂರ ರೀತಿಯಲ್ಲಿ ಹಾಸ್ಯಮಾಡುವುದನ್ನು ನಾನು ಕಂಡಿದ್ದೇನೆ. ಅದನ್ನು ನೋಡಿದಾಗ ನಾನು ಕಂಗೆಟ್ಟು ಹೋಗುತ್ತಿದ್ದೆ. ಇದೇ ಸಮಯದಲ್ಲಿ ನಾನು ಹಲವಾರು ಬಾರಿ ಲಕ್ಷ್ಮಿ ಜೊತೆ ಮಾತನಾಡುವ ಸಂದರ್ಭ ಬಂದಿತ್ತು. ಇದೇ ಬ್ಲಾಗ್ ನಲ್ಲಿ ಬರೆದಿರುವ ವಿಷಯಗಳನ್ನೇ ಲಕ್ಷ್ಮಿ ಅಂದೂ ಹೇಳಿದ್ದು. ಗೇಲ್ ಲಕ್ಷ್ಮಿಗೆ ಅಷ್ಟು ಕ್ರೂರತೆ ತೋರಿಸಿದ್ದರೂ ಕೂಡ, ಲಕ್ಷ್ಮಿ ಗೇಲ್ ಹೋದದಕ್ಕೆ ದುಃಖವನ್ನೇ ವ್ಯಕ್ತಪಡಿಸಿದಳು, ಮತ್ತೆ ಮರಳಿ ಬರಲಿ ಎಂದು ಆಶಿಸಿದಳು. ಗೇಲ್ ಅಮ್ಮನ ಆಶ್ರಮವನ್ನು ಬಿಟ್ಟುಬಂದ ಮೇಲೆ ಅವಳಿಗೆ ಒಂದು ಮೊತ್ತದ ಹಣ ನೀಡಿತು. ಅದನ್ನು ಅವಳು “ಪೆನ್ಷನ್” ಎಂದು ಕರೆದಳು. ಆ ಹಣವನ್ನು ಒಬ್ಬ ಇನ್ವೆಸ್ಟ್ ಮೆಂಟ್ ಅಡ್ವೈಸರ್ ನ ಬಳಿ ಡೆಪಾಸಿಟ್ ಮಾಡುವಲ್ಲಿ ನಾನು ಅವಳಿಗೆ ಸಹಾಯ ಮಾಡಿದ್ದೆ, ಹಾಗಾಗಿ ನನಗೆ ಈ ವಿಷಯ ವಯಕ್ತಿಕವಾಗಿ ತಿಳಿದಿದೆ. ಈ ಒಂದು ವಿಷಯವನ್ನು ಗೇಲ್ ತನ್ನ ಪುಸ್ತಕದ ಹೊರಗಿಟ್ಟಿರುವುದು ನನಗೆ ಕುತೂಹಲ ಎನಿಸಿದೆ. ತಾನೊಬ್ಬ “ಫ್ಯುಜಿಟೀವ್” (ಅಪರಾಧಿ) ಯಂತೆ ಕದ್ದು ಪಲಾಯನ ಮಾಡಬೇಕಾಯಿತು, ಮತ್ತು ಅಡಗಿಕೊಳ್ಳಬೇಕಾಯಿತು ಎಂದು ಬರೆದುಕೊಂಡಿದ್ದಾಳೆ; ಇದು ನನಗೆ ಗೊಂದಲವುಂಟು ಮಾಡುತ್ತದೆ. ಯಾಕೆಂದರೆ ಅವಳು ಎಲ್ಲಿದ್ದಾಳೆ ಎಂದು ಗೊತ್ತಿದ್ದರೂ ಆಶ್ರಮದವರು ಯಾರು ಅವಳನ್ನು ಬೆನ್ನಟ್ಟಿಬರಲಿಲ್ಲ.
“ಅವಳು ಆಶ್ರಮಕ್ಕೆ ಮರಳಬೇಕು ಎಂದು ಯಾರೂ ಅವಳನ್ನು ಬಲವಂತ ಮಾಡಲಿಲ್ಲ.”
ಅವಳು ಆಶ್ರಮಕ್ಕೆ ಮರಳಬೇಕು ಎಂದು ಯಾರೂ ಅವಳನ್ನು ಬಲವಂತ ಮಾಡಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವಳು ಸ್ವಾಮಿ ಅಮೃತಸ್ವರೂಪಾನಂದರ ಜೊತೆ ಪೋನಿನಲ್ಲಿ ಮಾತಾಡಿದ್ದುಂಟು; ಅವಳೇ ನಮ್ಮ ಮನೆಯ ಫೋನ್ ನಂಬರನ್ನು ಅವರಿಗೆ ಖುದ್ದಾಗಿ ಕೊಟ್ಟಿದ್ದಳು. ಅಷ್ಟು ಬಿಟ್ಟರೆ ಅಮ್ಮನ ಆಶ್ರಮದವರು ಅವಳನ್ನು ಅವಳ ಪಾಡಿಗೆ ಇರಲು ಬಿಟ್ಟಿದ್ದರು. ದಯಾಮೃತ ಸ್ವಾಮಿ ಹವಾಯಿಗೆ ಬಂದು, ಭಕ್ತರಿಗೆ ವಾರ್ಷಿಕ ರಿಟ್ರೀಟ್ (ಶಿಬಿರವನ್ನು) ನಡೆಸಿದಾಗ, ಹಲವಾರು ಭಕ್ತರು ನಮ್ಮ ಮನೆಯಲ್ಲಿ ಉಳಿದುಕೊಳ್ಳುವ ಕಾರಣ ಆ ಒಂದು ವಾರ ಗೇಲ್ ಗಾಗಿ ಬೇರೊಂದು ಜಾಗ ಬಾಡಿಗೆಗೆ ಹಿಡಿದೆವು. ರಿಟ್ರೀಟ್ ನಡೆದಿದ್ದಾಗ ಒಂದು ದಿನ ಭಕ್ತರಿಗೆಲ್ಲಾ ಗೇಲ್ ಸ್ವತಃ ಅಡುಗೆ ಮಾಡಿದಳು; ನಾವದನ್ನು ತೆಗೆದುಕೊಂಡು ಹೋಗಿ ಭಕ್ತರಿಗೆ ಬಡಿಸಿದೆವು. ಗೇಲ್ ಆಭರಣಗಳನ್ನು ಮಾಡಿ, ಮಾರಿ ಹಣ ಸಂಪಾದನೆ ಮಾಡತೊಡಗಿದಳು. ಅಡುಗೆ ಮಾಡಿ ಮನೆಯಿಂದ ಕೇಟರಿಂಗ್ ಮಾಡತೊಡಗಿದಳು. ಇಂಡಿಯನ್ ಕುಕ್ಕಿಂಗ್ (ಭಾರತೀಯ ಪಾಕಗಳನ್ನು) ಕಲಿಸುವ ತರಗತಿಯನ್ನೂ ನಡೆಸತೊಡಗಿದಳು. ಹೊಸ ಜೀವನದಲ್ಲಿ ಸಮಾಧಾನ ಪಡೆದವಳಂತೆ ತೋರುತ್ತಿದ್ದಳು. ಹೀಗಿರುವಾಗ, ಆಶ್ರಮ ಬಿಟ್ಟ ಹೊಸತರದಲ್ಲಿ ಒಂದಿಷ್ಟು ಸೂಚನೆಯೂ ಕೊಡದಿದ್ದ ಕಥೆಗಳನ್ನು ಈಗ ಹೇಗೆ ಹುಟ್ಟುಹಾಕಿಕೊಂಡಿದ್ದಾಳೆ ಎನ್ನುವುದು ನನಗಂತೂ ಗೊತ್ತಾಗುತ್ತಿಲ್ಲ. ತಿಳಿಯುವ ಕುತೂಹಲವೂ ನನಗಿಲ್ಲ; ಏನಾದರೂ ಆಗಬಾರದ್ದು ಆಗಿದ್ದರೆ ಆ “ಟ್ರೌಮ” (ಗಾಯ)ಆಶ್ರಮ ಬಿಟ್ಟ ಹೊಸತರಲ್ಲಿ ಹಸಿಯಾಗಿ ಅವಳ ಮನಸ್ಸಿನಲ್ಲಿ ಅದು ಗಾಢವಾಗಿರಬೇಕಿತ್ತಲ್ಲವೆ?
“ಈ ಆರೋಪಗಳಲ್ಲಿ ಒಂದೆಳೆಯಷ್ಟಾದರೂ ಸತ್ಯವೇ ಇರುವುದಾಗಿದ್ದರೆ, ಅದನ್ನು ಹೊರಗೆಡುಹಲು ಅವಳು ಇಷ್ಟು ವರ್ಷ ಯಾಕೆ ಕಾದಳು?”
ಅವಳು ಪುಸ್ತಕದಲ್ಲಿ ಹೇಳಿರುವ ವಿಷಯಗಳು ಏಕರೂಪವಾಗಿ, ಆಶ್ರಮ ಬಿಟ್ಟ ಮೊದಲು ವರ್ಷದಲ್ಲಿ ನಾನು ಕಂಡ ವ್ಯಕ್ತಿಯದಾಗಿರಲು ಸಾಧ್ಯವಿಲ್ಲ. ಅವು ಸಮರ್ಪಕವಾಗಿ ಹೊಂದುವುದಿಲ್ಲ. ಆಶ್ರಮದಿಂದ ಹೊರಗಿನ ಜೀವನಕ್ಕೆ ಹೊಂದಿಕೊಳ್ಳಲು ಅವಳಿಗೆ ಸ್ವಲ್ಪ ಕಷ್ಟವಾಗಿದ್ದಿರಬಹುದು ಹಾಗು ಆಶ್ರಮದ ಅನೇಕ ವಿಷಯಗಳ ಬಗ್ಗೆ ತನ್ನ ನಿರಾಶೆ, ಸಿಟ್ಟನ್ನು ವ್ಯಕ್ತಪಡಿಸಿದ್ದಳು, ಸರಿಯೇ. ಆದರೆ ಎಂದಿಗೂ ಲೈಂಗಿಕ ಶೋಷಣೆಯ ಬಗ್ಗೆ ಅಥವಾ, ಅಮ್ಮ ಅಥವಾ ಸ್ವಾಮಿಯರು ಲಿಂಗಾಧಾರಿತ ಭೇದಭಾವ ತೋರುವುದರ ಬಗ್ಗೆ ಒಂದು ಮಾತೂ ಹೇಳಿರಲಿಲ್ಲ. ಈ ಆರೋಪಗಳಲ್ಲಿ ಒಂದೆಳೆಯಷ್ಟಾದರೂ ಸತ್ಯವೇ ಇರುವುದಾಗಿದ್ದರೆ, ಅದನ್ನು ಹೊರಗೆಡುಹಲು ಅವಳು ಇಷ್ಟು ವರ್ಷ ಯಾಕೆ ಕಾದಳು?
ಒಂದು ವರ್ಷದ ಅವಳೊಂದಿಗಿನ ನನ್ನ ಒಡನಾಟದ ಆಧಾರದ ಮೇಲೆ, ಹಾಗು ನಾನು ಇಲ್ಲಿಗೆ ಮರಳಿ ಬಂದ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಅವಳ ಜೊತೆಗೆ ಆಗಾಗ ನಾನು ಭೇಟಿಮಾಡುತ್ತಿದ್ದಾಗಲೂ, ಆ ಒಡನಾಟದ ಆಧಾರದ ಮೇಲೆ ಹೇಳುವುದಾದರೆ, ಅವಳು ಈಗ ಮಾಡುತ್ತಿರುವ ಆರೋಪಗಳಲ್ಲಿ ಒಂದು ಕೂದಳೆಯಷ್ಟೂ ಸತ್ಯವಿಲ್ಲ. ಈ ಕಾರಣದಿಂದಾಗಿಯೇ, ನಾನು ಮುಂದೆ ಬಂದು ಸತ್ಯವನ್ನು ತಿಳಿಸಿ, ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳಲು ನಿರ್ಬಂಧಿತಳಾಗಿದ್ದೇನೆ.
– ಅರ್ಪಣಾ
Source:Arpana’s Memories of Gayatri