ಹಲೋ! ನನ್ನ ಹೆಸರು ಕ್ರಿಸ್ಟೀ. ನಾನು ನನ್ನ ಭಾಗದ ಕಥೆಯನ್ನು ಹೇಳಬಯಸುವೆ. ಗೇಲ್ ಟ್ರೆಡ್ವೆಲ್ ಆಶ್ರಮ ಬಿಟ್ಟು ಹೋದ ಕಾಲದಲ್ಲಿ ನಾನು ಆಶ್ರಮದಲ್ಲಿ ನೆಲೆಸಿದ್ದೆ. ಕಾರಣಗಳೇನೆಂದು ನನಗೆ ಗೊತ್ತಿಲ್ಲ, ಆದರೆ ಅವಳು ಹೋದಕೂಡಲೆ ಅವಳ ಆಪ್ತಗೆಳತಿಯರು ನನ್ನನ್ನು ತಮ್ಮ ಗುರಿಯಾಗಿಸಿಕೊಂಡು, ಅಮ್ಮನ ಮೇಲಿನ ನನ್ನ ವಿಶ್ವಾಸವನ್ನು ಹಾಳುಮಾಡಲು ತುಂಬಾ ಪ್ರಯತ್ನಿಸಿದರು. ಅವರ ಜೊತೆ ನಾನೂ ಆಶ್ರಮದಿಂದ ಹೊರಹೋಗಬೇಕು ಎಂದು ನನ್ನನ್ನು ಬೇಡುತ್ತಿದ್ದರು. ಅವರು ಬೇಕಾದಂತೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದರು. ಕೊಂಚಕಾಲದ ವರೆಗೆ ಅದೆಲ್ಲವೂ ವಿಷದ ಹಾಗೆ ನನ್ನ ಮನಸ್ಸನ್ನು ಹೊಕ್ಕವು; ಕೊಂಚಕಾಲ ನಾನು ಅವರು ಹೇಳುತ್ತಿದ್ದನ್ನು ಕೇಳಿಸಿಕೊಂಡೆ.
ಅಮ್ಮನ ಜೊತೆಗೆ ಅಷ್ಟೊಂದು ವರ್ಷ ಕಳೆದಮೇಲೂ, ಅಮ್ಮನ ಅಸಾಮಾನ್ಯ ಪ್ರೇಮವನ್ನು ಪಡೆದವಳಾಗಿಯೂ, ನಾನು ಒಂದು ಕ್ಷಣವಾದರೂ ಸರಿ, ಏಕೆ ನಾನೆಂದೂ ನಂಬದ ಒಬ್ಬಾಕೆಯ ಅಭಿಪ್ರಾಯಗಳನ್ನು ಆಧರಿಸಿದ ಅವರುಗಳ ಮಾತು ಕೇಳುವಂತಾದೆ? ಎಂದು ಅನೇಕ ಸಲ ಈಗಲೂ ಯೋಚಿಸುತ್ತೇನೆ. ನಾನು ಮನುಷ್ಯಳಲ್ಲವೆ? ನನ್ನದೇ ಆದ ಭಯಾತಂಕಗಳು ದುರ್ಗುಣಗಳೂ ಇರುತ್ತವೆ; ಸೂಕ್ತ ಸಂದರ್ಭ ಎದುರಾದಾಗ ತಾತ್ಕಾಲಿಕವಾಗಿ ನಾನು ಅವುಗಳಿಂದಾಗಿ ಅಂಧೆಯಾಗಿದ್ದೆ. ಆಗ ನಾನು ಕೂತು ಆತ್ಮಾವಲೋಕನ ಮಾಡತೊಡಗಿದೆ. ನನ್ನ ಜೀವನದಿಂದ ನಾನು ಮಾಡಬೇಕಾಗಿರುವುದು ಏನು ಎಂದು ಕಂಡುಕೊಂಡೆ. ಇವತ್ತು ನನಗೆ ಪಶ್ಚಾತ್ತಾಪವಿಲ್ಲ. ಸಂಶಯವೂ ಇಲ್ಲ. ಅಮ್ಮ ನನಗೆ ಏನೆಲ್ಲಾ ನೀಡಿದ್ದಾರೆ ಅದಕ್ಕೆ ನಾನು ಧನ್ಯತೆಯೊಂದನ್ನು ಮಾತ್ರವೇ ಹೇಳಬಲ್ಲೆ. ಕಳೆದ ೧೫ ವರ್ಷಗಳು ನನ್ನ ಜೀವನದಲ್ಲಿ ಅತ್ಯಂತ ಸಂತೋಷಮಯ ಕಾಲವಾಗಿದೆ. ಎಷ್ಟೇ ಚಿಕ್ಕದಾಗಿ ಆದರೂ ಸಹ ನಾನು ಅಮ್ಮನ ಸಂಸ್ಥೆಯ ಭಾಗವಾಗಿರುವುದು, ನನಗೆ ಸಮಾಧಾನ ನೀಡಿದೆ, ತೃಪ್ತಿ ನೀಡಿದೆ.
“ಗೇಲ್, ತಾನೇ ಇತರರನ್ನು ಹಿಂಸಿಸುತ್ತಿದ್ದಳು; ಹಾಗಿದ್ದೂ ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೆ ಗುರಿಯಾದೆ ಎಂದು ಬರೆದುಕೊಂಡಿರುವುದು ನನಗೆ ವ್ಯಂಗ್ಯೋಕ್ತಿಯಾಗಿ ತೋರುತ್ತಿದೆ. ಅವಳು ಅಮ್ಮನನ್ನು ಎರಡು ಮುಖದವರಾಗಿ ಚಿತ್ರಿಸುತ್ತಾಳೆ, ಆದರೆ ಆ ಮುಖಗಳ ವರ್ಣನೆ ನೋಡಿದಾಗ ನನಗೆ ಅಮ್ಮ ಅಲ್ಲ, ಗೇಲ್ ನೆನಪಾಗುತ್ತಾಳೆ.”
ಗೇಲ್ ಬಿಟ್ಟುಹೋದಾಗಿನಿಂದ, ಇಂದಿನ ವರೆಗೂ ತಾನು ಶೋಷಣೆಗೆ ಬಲಿಯಾದೆ ಎಂಬ ತನ್ನ ಅನಿಸಿಕೆಯ ಸುಳ್ಳುಗಳನ್ನೇ ಹರಡುತ್ತಿದ್ದಾಳೆ. ನಿಮ್ಮನ್ನೂ ಬಲಿಹಾಕಬೇಕೆಂಬ ಅವಳ ಹೊಂಚಿನ ಕಾರಣ, ನಾನು ನಿಮ್ಮನ್ನು ಉದ್ದೇಶಿಸಿ ಈಗ ಬರೆಯುತ್ತಿರುವುದು. ಅವಳ ಪುಸ್ತಕವನ್ನು ನೀವು ಓದುವಿರಾದರೆ ಸ್ಪಷ್ಟ ತಾರ್ಕಿಕ ಮನಸ್ಸಿನಿಂದ ಓದುವಂತಾಗಲಿ; ನಿಮ್ಮದೇ ಅನುಭವಗಳನ್ನು ಕಡೆಗಾಣಿಸಿ ಅಥವಾ ಇಲ್ಲವಾಗಿಸಿಕೊಂಡು ಅದರಲ್ಲಿ ಕಳೆದುಹೋಗದಿರಲಿ ಎಂದು ಆಶಿಸುತ್ತಾ ನನ್ನ ಅನುಭವಗಳನ್ನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಛ್ಛಿಸುವೆ.
ಅವಳನ್ನು ನೆನಪಿಸಿಕೊಂಡರೆ ಅವಳು ಹೇಗಿದ್ದಳು ಎಂದು ಹೇಳುವುದೇ ಕಷ್ಟ. ಒಮ್ಮೆ ಸ್ನೇಹಪರಳಾಗಿದ್ದರೆ ಇನ್ನೊಮ್ಮೆ ಇನ್ನೊಬ್ಬರ ಕಡೆ, ನಮಗೆ ನಂಬಿಕೆ ಬರಲು ಕಷ್ಟವಾಗುವಷ್ಟು ದ್ವೇಷ, ಕುಹಕ ತೋರುತ್ತಿದ್ದಳು. ಒಮ್ಮೆ ಸಿಯಾಟಲ್ ಏರ್ಪೋರ್ಟ್ ನಲ್ಲಿ ನಡೆದಿದ್ದು ನೆನಪಾಗುತ್ತಿದೆ. ಅಮ್ಮನ ಫ್ಲೈಟ್ ಹೊರಡಲಿತ್ತು, ನಾವೆಲ್ಲಾ ಕಾಯುತ್ತಿದ್ದೆವು. ಅದೂ ಇದು ಮಾತಾಡುತ್ತಾ ಒಳ್ಳೆಯ ಮೂಡಿನಲ್ಲಿ ನಿಂತಿದ್ದೆವು. ನಾನಂತೂ ಹಾಗೆಂದುಕೊಂಡಿದ್ದೆ. ಒಂದು ಹಂತದಲ್ಲಿ ಒಬ್ಬ ಭಕ್ತರು ಪಾಪ, ಅವಳ ಹತ್ತಿರ ಹೋಗಿ, ತುಂಬಾ ವಿನಯದಿಂದಲೇ, ವಿಮಾನ ಹೊರಡುವ ಸಮಯವಾಯಿತು, “ಚೆಕ್ ಇನ್” ಮುಗಿಯುತ್ತಾ ಬಂತು ಎಂದು ನೆನಪಿಸಿದ. ಗೇಲ್ ಕೂಗಾಡತೊಡಗಿದಳು: “ನಾನು ಯಾರು ಎಂದು ನಿನಗೆ ಗೊತ್ತಿಲ್ಲವಾ? ನಾನು ಏನು ಮಾಡಬೇಕು ಎಂದು ಹೇಳಲು ನೀನು ಯಾರು? ಯೂ ಸ್ಟುಪಿಡ್ ಈಡಿಯೆಟ್, ಹೋಗಾಚೆ! ನಾನು ರೆಡಿಯಾದಮೇಲೆ ಚೆಕ್ ಇನ್ ಮಾಡಿಕೊಳ್ಳುವೆ!” ಎಂದುಬಿಟ್ಟಳು. ನಾನು ದಂಗುಬಡಿದು ಹೋದೆ. ನನಗೆ ಮುಜುಗರವೂ ಆಯಿತು. ಇಂಥ “ಬೈ ಪೋಲಾರ್ ಬಿಹೇವಿಯರ್” ಅನ್ನು ಅವಳಲ್ಲಿ ಆಗಾಗ ಕಂಡಿದ್ದರೆ ನಾನು ಅವಳ ಮಾನಸಿಕ ಆರೋಗ್ಯದ ಬಗ್ಗೆ ವಿಚಾರಿಸಿರುತ್ತಿದ್ದೆ. ಬದಲಿಗೆ “ಹೋಗಲಿಬಿಡು” ಎಂದುಕೊಂಡು ಆದದ್ದನ್ನು ಮರೆಯಲು ಪ್ರಯತ್ನಿಸಿದೆ.
“ಒಬ್ಬ ಭಕ್ತರು ಪಾಪ, ಅವಳ ಹತ್ತಿರ ಹೋಗಿ, ತುಂಬಾ ವಿನಯದಿಂದಲೇ, ವಿಮಾನ ಹೊರಡುವ ಸಮಯವಾಯಿತು, ಚೆಕ್ ಇನ್ ಮುಗಿಯುತ್ತಾ ಬಂತು ಎಂದು ನೆನಪಿಸಿದ. ಗೇಲ್ ಕೂಗಾಡತೊಡಗಿದಳು: “ನಾನು ಯಾರು ಎಂದು ನಿನಗೆ ಗೊತ್ತಿಲ್ಲವಾ? ನಾನು ಏನು ಮಾಡಬೇಕು ಎಂದು ಹೇಳಲು ನೀನು ಯಾರು? ಯೂ ಸ್ಟುಪಿಡ್ ಈಡಿಯೆಟ್, ಹೋಗಾಚೆ! ನಾನು ರೆಡಿಯಾದಮೇಲೆ ಚೆಕ್ ಇನ್ ಮಾಡಿಕೊಳ್ಳುವೆ!” ಎಂದುಬಿಟ್ಟಳು.”
ಗೇಲ್ ತಾನೇ ಇತರರನ್ನು ಹಿಂಸಿಸುತ್ತಿದ್ದಳು; ಹಾಗಿದ್ದೂ ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೆ ಗುರಿಯಾದೆ ಎಂದು ಬರೆದುಕೊಂಡಿರುವುದು ನನಗೆ ವ್ಯಂಗ್ಯೋಕ್ತಿಯಾಗಿ ತೋರುತ್ತಿದೆ. ಅವಳು ಅಮ್ಮನನ್ನುಎರಡು ಮುಖದವರಾಗಿ ಚಿತ್ರಿಸುತ್ತಾಳೆ, ಆದರೆ ಆ ಮುಖಗಳ ವರ್ಣನೆ ನೋಡಿದಾಗ ನನಗೆ ಅಮ್ಮ ಅಲ್ಲ, ಗೇಲ್ ನೆನಪಾಗುತ್ತಾಳೆ. ಮಾತ್ರವಲ್ಲ, ಗೇಲ್ ಗೆ ಸಹಾಯ ಮಾಡಿದ, ಅವಳನ್ನು ಆದರಿಸಿದ ಅದೇ ಜನರಿಗೆ, ಅವರ ಈ ಪ್ರೀತಿ ವಾತ್ಸಲ್ಯಕ್ಕೆ ಪ್ರತಿಯಾಗಿ ಅವಳು ನೀಡುತ್ತಿದ್ದ ಮಾನಸಿಕ ಹಾಗು ಕೆಲವೊಮ್ಮೆ ದೈಹಿಕ ಕಿರುಕುಳಗಳನ್ನು ಹೇಗೆ ತಾನೇ ಅವರು ಸಹಿಸಿಕೊಳ್ಳುತ್ತಿದ್ದರು ಎಂದು ಕೆಲವೊಮ್ಮೆ ಯೋಚಿಸಲು ನನಗೆ ಅಚ್ಚರಿಯಾಗುತ್ತದೆ. ತನ್ನ ಸುತ್ತಲೂ ಇದ್ದವರಿಂದ ಸೇವೆ, ಪ್ರೀತಿ, ಸ್ತುತಿ ಇವುಗಳನ್ನೇ ಸದಾ ಪಡೆಯುತ್ತಿದ್ದರೂ ಗೇಲ್ ಸದಾ ಮಂತ್ರದಂದೆ ಜಪಿಸುತ್ತಾ ಹೇಳುತ್ತಿದ್ದುದು, “ನನ್ನನ್ನು ಯಾರೂ ಪ್ರೀತಿಸುವುದಿಲ್ಲ… ನನ್ನ ಬಗ್ಗೆ ಯಾರೂ ಕೇರ್ ಮಾಡುವುದಿಲ್ಲ… ನನ್ನನ್ನು ಯಾರೂ ಕನ್ಸಿಡರ್ ಮಾಡುವುದಿಲ್ಲ…” ಎಂದು.
ಗೇಲ್ ಆಶ್ರಮ ಬಿಡುವ ಕೆಲವು ತಿಂಗಳ ಹಿಂದೆ ಅವಳು ಹೇಳಿದ ಒಂದು ಮಾತಿನಿಂದ ನಾನು ದಂಗುಬಡಿದುಹೋಗಿದ್ದು ನೆನಪಾಗುತ್ತಿದೆ. ಅಮ್ಮ ಇಲ್ಲದೆ ತಾನೊಬ್ಬಳೇ ಅಮೆರಿಕಾಗೆ ಹೋಗಬೇಕು, ತನ್ನದೇ ಟೂರನ್ನು ಮಾಡಬೇಕು, ತನ್ನದೇ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಅವಳಿಗೆ ಆಸೆಯಾಗಿತ್ತು. ಅವಳ ಈ ಹೇಳಿಕೆಯನ್ನು ಕೇಳಿ ನನಗೆ ಅತಿ ವಿಚಿತ್ರವೆನಿಸಿತು. ಹೀಗೆ ಏನೋ ಪ್ಲಾನ್ ಮಾಡುತ್ತಿದ್ದಳು ಎಂದು ಅಂದೇ ನನಗೆ ಹೊಳೆಯಬೇಕಿತ್ತು. ಅವಳಿಗೆ ಎಲ್ಲರ ಗಮನ ತನ್ನ ಮೇಲೆ ಇರಬೇಕು, ಎಲ್ಲರೂ ತನ್ನನ್ನೇ ಮುಖ್ಯವಾಗಿಸಬೇಕು ಎಂಬ ಅವಳ ತೀರದ ಬಯಕೆ ಅತಿಯಾಗಿರಬೇಕು; ಅದೇ ಅವಳ ಹೃದಯವನ್ನು ಮನಸ್ಸನ್ನೂ ಒಂದು “ವೈರಸ್ ನ” ಹಾಗೆ ಹರಡಿರಬೇಕು. ಅವಳಿಗೆ ಜೀವನದಲ್ಲಿ ಬೇಕಿದ್ದುದು ಜನರು ತನ್ನನ್ನು ಮಾತ್ರ ಶ್ಲಾಘಿಸಬೇಕು, ತನ್ನನ್ನು ಮಾತ್ರ ಗೌರವಿಸಬೇಕು, ತನ್ನನ್ನು ಮಾತ್ರ ಪ್ರೀತಿಸಬೇಕು ಎಂಬುದು ಈಗ ಸ್ಪಷ್ಟವಾಗುತ್ತಿದೆ.
ತಾನು ಆಶ್ರಮ ಬಿಡುವುದರಿಂದ ಆಶ್ರಮಕ್ಕೆ ದೊಡ್ದ ಆಘಾತವಾಗುತ್ತದೆ ಎಂದು ಗೇಲ್ ಆಲೋಚಿಸಿರಬೇಕು. ತಾನು ಎಂದರೆ ಯಾರು? ಗೇಲ್ ಟ್ರೆಡ್ವೆಲ್ ಅಲ್ಲವೆ? ಆದರೆ ಅದು ಹಾಗಾಗಲಿಲ್ಲ. ಜನ ಅವಳು ಹೋದದನ್ನು ಒಪ್ಪಿಕೊಂಡರು. ಬಹುಬೇಗ ನಾವೆಲ್ಲರೂ ಅವಳನ್ನು ಮರೆತುಬಿಟ್ಟೆವೂ ಸಹ. ಯಾಕೆ?… ಯಾಕೆಂದರೆ ನಾವು ಆಶ್ರಮದಲ್ಲಿ ಇದ್ದಿದ್ದು ಅಮ್ಮನಿಗಾಗಿ. ಗೇಲ್ ಳ ದುರ್ಗುಣಗಳನ್ನೆಲ್ಲಾ ಕವಿಯುವಷ್ಟು ಅಮ್ಮನ ಪ್ರೇಮಪ್ರಕಾಶ ಬೆಳಗುತ್ತಿತ್ತು. ಅಮ್ಮನ ಕರುಣೆಯ ಉದಾಹರಣೆಯಿಂದ ಕಲಿಯಲೆಂದೇ ನಾವೆಲ್ಲಾ ಅಲ್ಲಿ ಇದ್ದಿದ್ದು. ಎಲ್ಲರ ಗಮನವನ್ನು ಪಡೆಯುವ ಆಸೆ ಇದ್ದ ಗೇಲ್ ಗೆ ಇಷ್ಟು ಬೇಗ ನಾವೆಲ್ಲಾ ಅವಳನ್ನು ಮರೆತುಬಿಟ್ಟಿರುವುದು ಹೇಗನಿಸಿರಬೇಕು ಎಂದು ನಾನು ಊಹಿಸಬಲ್ಲೆ. ಇತರರ ಮನಸ್ಸುಗಳನ್ನು ಅಮ್ಮನಿಂದ ವಿಮುಖವಾಗಿಸಬೇಕೆಂಬ ಅವಳ ಯೋಜನೆಯು ವಿಫಲವಾಗಿ, ಹೀನವಾಗಿ ಸೋತಿತು… ಸೋಲನ್ನು ಒಪ್ಪಿಕೊಂಡು ತನ್ನ ಜೀವನವನ್ನು ಮುನ್ನಡೆಸಿಕೊಂಡು ಹೋಗುವ ಬದಲು ಅವಳು, “ತನ್ನ ದನಿ ಮತ್ತೆ ಕೇಳುವಂತಾಗಲು ಏನು ಮಾಡಬೇಕು, ಜನರ ಗಮನ ನನ್ನೆಡೆಗೆ ತಿರುಗಬೇಕು, ಜನ ನನ್ನನ್ನು ನೆನಪಿಸಿಕೊಳ್ಳಬೇಕು ಎಂದರೆ ಏನು ಮಾಡಬೇಕು?” ಎಂದು ಕುತಂತ್ರ ಮಾಡತೊಡಗಿರಬೇಕು.
“ರೋಲಿಂಗ್ ಸ್ಟೋನ್” ನಲ್ಲಿ ಗೇಲ್ ನೀಡಿರುವ ಸಂದರ್ಶನ ಓದುವಾಗ ಸತ್ಯವನ್ನು ಅವಳು ತಿರುಚುವ ರೀತಿ ಕಂಡು ನನಗೆ ಆಘಾತವಾಯಿತು. ಆಶ್ರಮ ಬಿಟ್ಟುಹೋಗುವ ವರ್ಣನೆಯಲ್ಲಿ ಅವಳು, “ನಾನು ಹೋಗಿ ಇರಬೇಕಾದ ಮನೆ ಖಾಲಿಯಾಗುವ ಕ್ಷಣದವರೆಗೆ ಕಾದೆ. ಆದಕೂಡಲೆ ಕಾರಿನ ಬ್ಯಾಕ್ ಸೀಟಿನ ಕೆಳಗೆ ಒಂದು ಬ್ಲಾಂಕೆಟ್ ನ ಮರೆಯಲ್ಲಿ ಕೂತೆ ಅಲ್ಲಿಗೆ ನಾನು ಹೋದೆ,” ಎಂದು ಬರೆಯುತ್ತಾಳೆ. ಅವಳು ಕಾರಿನಲ್ಲಿ ನೆಟ್ಟಗೆ ಕುಳಿತೇ ಹೋಗಿದ್ದರೂ ನೋಡಿದವರು ಯಾರೂ ಏನೂ ಯೋಚಿಸುತ್ತಿರಲಿಲ್ಲ. ಆದರೆ ಅವಳು ತನ್ನ ಮನಸಿನಲ್ಲಿ ಯಾವುದೋ ಜೇಮ್ಸ್ ಬಾಂಡ್ ಚಿತ್ರದ ಯಾವುದೋ ಒಂದು ಪಾತ್ರವನ್ನು ಅಭಿನಯಿಸುತ್ತಿದ್ದಳು! ಅವಳ ಪ್ಯಾರನೋಯ ಹೆಚ್ಚಿತ್ತು.
ಗೇಲ್ ಳ ಪುಸ್ತಕ ಓದಿದ ಮೇಲೆ, ಇಷ್ಟು ವರ್ಷಗಳ ಕಾಲವೂ ಅವಳ ಭ್ರಮೆಗಳೆಲ್ಲಾ ಹೇಗೆ ಬೆಳೆದುಕೊಂಡುಬಂದಿವೆ ಎಂದು ಕಂಡು ನನಗೆ ಆಶ್ಚರ್ಯವಾಗುತ್ತಿದೆ. ಹದಿನಾಲ್ಕು ವರ್ಷ ತಾನು ಹೇಳಬೇಕಾದ್ದನ್ನು ಯಾರೂ ಕೇಳದಿದ್ದರೆ, ಹದಿನಾಲ್ಕು ವರ್ಷಗಳ ಕಾಲ ಕೇಳುವವರೇ ಇಲ್ಲದಿದ್ದರೆ, ವ್ಯಕ್ತಿಯು ಆಗ ಬಾಯಿಗೆ ಬಂದಹಾಗೆ ಅನ್ನತೊಡಗುತ್ತಾನೆ, ಮನಸ್ಸಿಗೆ ಬಂದಿದ್ದನ್ನು ಮಾಡತೊಡಗುತ್ತಾನೆ. ತಮ್ಮ ಜೀವನಕ್ಕೆ ಅರ್ಥವಿಲ್ಲವಾಯಿತು ಎಂದು ಒಪ್ಪಿಕೊಳ್ಳಲು ಅವರಿಂದಾಗುವುದಿಲ್ಲ.
ಗೇಲ್ ಈಗ ಮಾಡುತ್ತಿರುವ ಆರೋಪಗಳನ್ನು ನೋಡಿದರೆ ಎಷ್ಟು ಅಸಂಬದ್ಧವೆಂದು ತೋರುತ್ತಿದೆ ಎಂದರೆ ಅವಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತಿಳಿಯುತ್ತಿಲ್ಲ. ತನ್ನನ್ನು ಎಷ್ಟು ಹಾಸ್ಯಾಸ್ಪದವಾಗಿಸಿಕೊಳ್ಳುತ್ತಿದ್ದಾಳೆ ಎಂದು ನೋಡಿ ನನ್ನ ಮನಸ್ಸಿನ ಒಂದು ಭಾಗಕ್ಕೆ ನಗುಬರುತ್ತಿದೆ; ಇನ್ನೊಂದು ಭಾಗ, ಪವಿತ್ರವಾದ ಒಂದೊಂದನ್ನು ಕೈಗೆತ್ತಿಕೊಂಡು, ಒಂದಿಷ್ಟೂ ಹಿಂಜರಿಕೆಯಿಲ್ಲದೆ ಅವಳು ಅದರ ಮೇಲೆ ಉಗುಳುವುದನ್ನು ನೋಡಿದಾಗ ನನಗೆ ಅಳುಬರುತ್ತದೆ.
ಅವಳು ನನ್ನಲ್ಲಿ ಭಯ ಮತ್ತು ಸಂಶಯಗಳನ್ನು ಬಿತ್ತಲು ಪ್ರಯತ್ನಿಸಿದ್ದು ನೆನೆದರೆ ಗೇಲ್ ಟ್ರೆಡ್ವೆಲ್ ಳನ್ನು ದ್ವೇಷಮಾಡದೆ ಇರುವುದು ನನಗೆ ಬಹಳ ಕಷ್ಟವಾಗುತ್ತಿದೆ. ನನ್ನ ಜೀವನವನ್ನು ಒಂದು ಅಣಕವಾಗಿಸಲು ಪ್ರಯತ್ನಿಸುತ್ತಿರುವುದು ನೋಡಿದರೆ ಅವಳನ್ನು ದ್ವೇಷಮಾಡದೆ ಇರಲು ಕಷ್ಟವಾಗುತ್ತದೆ. ನಿಷ್ಕಳಂಕತೆಯಿಂದ ಹಾಗು ಸೌಂದರ್ಯದಿಂದ ಕೂಡಿರುವ, ಅಮ್ಮ ಕಲಿಸಿರುವ ಭಗವಂತನನ್ನು ಪ್ರೇಮಿಸುವ ಪಥವನ್ನು ಅವಳು ಹಾಳುಮಾಡುತ್ತಿರುವುದನ್ನು ಕಂಡಾಗ ಅವಳನ್ನು ದ್ವೇಷಮಾಡದೆ ಇರುವುದು ಕಷ್ಟವಾಗುತ್ತದೆ. ಆದರೆ ಅಂತಿಮವಾಗಿ ಅವಳನ್ನು ದ್ವೇಷಿಸಿ ನನಗೆ -ಅಥವಾ ಅವಳಿಗಾದರೂ- ಆಗುವ ಲಾಭವೇನು?
ಸಮಾಜದಲ್ಲಿ ಹಿರಿಯರೆನಿಸಿಕೊಂಡ ಯಾವ ವ್ಯಕ್ತಿಯೂ ವಿಮರ್ಶೆಯಿಂದಾಗಲೀ, ವಾಕ್ ಶೋಷಣೆಯಿಂದಾಗಲಿ, ಆಕ್ರಮಣದಿಂದಾಗಲಿ ಹೊರತಾಗಿಲ್ಲ ಎಂದು ತೋರುತ್ತದೆ. ಅದು ಇದ್ದಿದ್ದೇ. ಆದರೆ ಅಮ್ಮನ ವಿಷಯದಲ್ಲಿ ಅತ್ಯಂತ ಅಮೋಘವಾದುದು ಏನೆಂದರೆ, ಅಮ್ಮನ ಪಾಲಿಗೆ ಏನು ಬಂದರೂ ಸರಿ, ಅಮ್ಮ ಮಾತ್ರ ಪ್ರೇಮ ನೀಡುತ್ತಾ, ಎಲ್ಲರನ್ನೂ ಸ್ವೀಕರಿಸುತ್ತಾ, ಕ್ಷಮಿಸುತ್ತಾ ಸಾಗುತ್ತಾ ಇರುತ್ತಾರೆ. ಅದರ ಮೌಲ್ಯವನ್ನು ನಾವು ಅರಿತುಕೊಳ್ಳಲಿ ಬಿಡಲಿ- ಅದು ನಮಗೆ ಸೇರಿದ್ದು.
– ಕ್ರಿಸ್ಟೀ
Source:Kristy’s Memories of Gayatri